ಬೆಂಗಳೂರು: ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು (Student) ಕಡ್ಡಾಯವಾಗಿ ಕರೆತರಬೇಕು ಎಂದು ಸುತ್ತೋಲೆ ಹೊರಡಿಸಿದ್ದ ಡಿಡಿಪಿಯು ವಿವಾದವಾಗುತ್ತಿದ್ದಂತೆ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ (Narendra Modi) ಬೆಂಗಳೂರು (Bengaluru) ಪ್ರವಾಸಕ್ಕೆ ಮೂರು ದಿನವಷ್ಟೇ ಬಾಕಿ ಉಳಿದಿದೆ. ದೇವನಹಳ್ಳಿಯ ಮೋದಿ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕರೆತರಬೇಕು. ಇಲ್ಲ ಎಂದರೇ ಆಯಾ ಕಾಲೇಜುಗಳ ಪ್ರಾಂಶುಪಾಲರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿ ಬೆಂಗಳೂರು ಡಿಡಿಪಿಯು, ತಮ್ಮ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದರು. ಅಷ್ಟೇ ಅಲ್ಲದೇ ಇದಕ್ಕಾಗಿ 134 ಬಸ್ಗಳ ವ್ಯವಸ್ಥೆ ಮಾಡಿರುವುದಾಗಿಯೂ ತಿಳಿಸಿದ್ದರು.
ಆದರೆ ಇದಕ್ಕೆ ದೊಡ್ಡ ಮಟ್ಟದಲ್ಲಿ ಆಕ್ಷೇಪಗಳು ವ್ಯಕ್ತವಾದ ಕೂಡಲೇ ಈ ವಿವಾದಾತ್ಮಕ ಆದೇಶವನ್ನು ಡಿಡಿಪಿಯು ಹಿಂಪಡೆದಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಣ ಸಚಿವರ ಗಮನಕ್ಕೆ ತಾರದೇ ಡಿಡಿಪಿಯು ಈ ಆದೇಶ ಹೊರಡಿಸಿದ್ದರು ಎನ್ನಲಾಗಿದೆ. ವಿಷಯ ಗೊತ್ತಾದ ಕೂಡಲೇ ಸಚಿವ ನಾಗೇಶ್, ಬೆಂಗಳೂರು ಗ್ರಾಮಾಂತರ ಡಿಸಿ ಸೂಚನೆ ಮೇರೆಗೆ ಡಿಡಿಪಿಯು ಈ ಆದೇಶವನ್ನು ರದ್ದು ಮಾಡಿದ್ದಾರೆ

