ತುಮಕೂರು: ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್‌ ಗೌಡ (Suresh Gowda)  ವಿರುದ್ಧ ಹೆಬ್ಬೂರು ಪೊಲೀಸ್‌ ಠಾಣೆಯಲ್ಲಿ ಎಫ್.ಐ.ಆರ್‌ (FIR) ದಾಖಲಾಗಿದೆ. ಜೆಡಿಎಸ್‌ ಶಾಸಕ ಬಿ.ಸಿ ಗೌರಿಶಂಕರ್‌ ದೂರಿನ ಮೇರಿಗೆ ಎಫ್.ಐ.ಆರ್‌ ದಾಖಲಿಸಲಾಗಿದೆ. ಸುರೇಶ್‌ ಗೌಡರಿಂದ ನನಗೆ ಜೀವ ಬೆದರಿಕೆಯಿದೆ ಎಂದು ಶಾಸಕ ಗೌರಿಶಂಕರ್‌ ದೂರಿದ್ದಾರೆ.

ತುಮಕೂರು ಗ್ರಾಮಾಂತರದ ಅರೆಯೂರಿನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ, ಸುರೇಶ್​ ಗೌಡನನ್ನು ಕೊಲೆ ಮಾಡಲು, ಗೌರಿಶಂಕರ್‌ ಜೈಲಿನಲ್ಲಿರುವ ಸುಜಯ್‌ ಭಾರ್ಗವ್‌ಗೆ 5 ಕೋಟಿ ರೂಪಾಯಿ ಸುಫಾರಿ ನೀಡಿದ್ದಾರೆಂದು ಸುರೇಶ್​ ಗೌಡ, ಗೌರಿಶಂಕರ್‌ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು ಶಾಸಕ ಗೌರಿಶಂಕರ್‌ ದೂರು ನೀಡಿದ್ದಾರೆ.‘

ಇದರಿಂದ ತೇಜೋವಧೆಯಾಗಿದೆ. ಸುರೇಶ್‌ ಗೌಡರ ಈ ಭಾಷಣದ ಹೇಳಿಕೆಯಿಂದ ನನಗೆ ಜೀವ ಭಯ ಕಾಡುತ್ತಿದೆ. ಮಾಜಿ ಶಾಸಕರ ಈ ಹೇಳಿಕೆ ಗಮನಿಸಿದರೆ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆಂಬ ಅನುಮಾನ ಮೂಡುತ್ತಿದೆ. ಮಾಜಿ ಶಾಸಕ ಸುರೇಶ್‌ ಗೌಡ ನನ್ನನ್ನು ಯಾವಾಗಲಾದ್ರೂ ಕೊಲೆ ಮಾಡಿಸಬಹುದು ಎಂಬ ಅನುಮಾನವಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಸುರೇಶ್‌ ಗೌಡ ಈ ರೀತಿಯ ಹೇಳಿಕೆ ಕೊಡುವ ಮೂಲಕ ಕ್ಷೇತ್ರದಲ್ಲಿ ದ್ವೇಷ ಕಿಚ್ಚು ಹಚ್ಚಿದ್ದಾರೆ. ನನ್ನ ವಿರುದ್ಧ ಅಪನಂಬಿಕೆ ಬರುವಂತೆ ಹೇಳಿಕೆ ಕೊಡುತ್ತಿದ್ದಾರೆಂದು ದೂರಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಸೆಕ್ಷನ್‌ 120(ಬಿ) 506 ಐಪಿಸಿ ಅಡಿಯಲ್ಲಿ ದೂರು ದಾಖಲಾಗಿದೆ.