ತುಮಕೂರು: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದು, ರಾಜಕೀಯ ಚಟುವಟಿಕೆ ಗರಿಗೆದರುತ್ತಿದೆ. ಈಗ ಜಿಲ್ಲೆಯಲ್ಲಿ ಆಣೆ ಪ್ರಮಾಣ ರಾಜಕೀಯ ಶುರುವಾಗಿದೆ. ಜೆಡಿಎಸ್‌ ಅಭ್ಯರ್ಥಿಯೊಬ್ಬರು ಇದನ್ನು ಪ್ರಾರಂಭಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ತುಮಕೂರು ನಗರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಗೋವಿಂದರಾಜು ಆಣೆ ಪ್ರಮಾಣ ರಾಜಕೀಯವನ್ನು ಪ್ರಾರಂಭ ಮಾಡಿದ್ದು, ಈ ಮೂಲಕ ಮತ ಬೇಟೆಗೆ ಮುಂದಾಗಿದ್ದಾರೆ. ನನಗೆ ಮತ ಹಾಕಬೇಕೆಂದು ಮತದಾರರಿಂದ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ.

ದೇವಸ್ಥಾನದಲ್ಲಿ ಪ್ರಮಾಣ
ಇನ್ನೈದು ತಿಂಗಳೊಳಗೆ ಚುನಾವಣೆ ನಡೆಯುವುದರಿಂದ ತಮ್ಮ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಗೋವಿಂದರಾಜು ಅವರು ತಮ್ಮ ಮತ ಕ್ಷೇತ್ರದ ಜನರನ್ನು ಮಂಗಳವಾರ (ಡಿ.೧೩) ಹೆತ್ತೇನಹಳ್ಳಿ ಅಮ್ಮ (ಮಾರಮ್ಮ) ದೇವಸ್ಥಾನಕ್ಕೆ ಕರೆದೊಯ್ದು ಆಣೆ ಪ್ರಮಾಣವನ್ನು ಮಾಡಿಸಿದ್ದಾರೆ.

ಈ ಮತದಾರರನ್ನು ಬಸ್‌ನಲ್ಲಿ ಕರೆದೊಯ್ದು ದೇವರ ಮುಂದೆ ಆಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಗೋವಿಂದರಾಜು ಪ್ರತಿ ದಿನ ಬಸ್‌ನಲ್ಲಿ ಜನರನ್ನು ಕರೆದೊಯ್ದು ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ತುಮಕೂರು ನಗರ ಬಿಜೆಪಿ ಘಟಕವು ಈ ಸಂಬಂಧ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಆಣೆ ಪ್ರಮಾಣದಂತಹ ಆಮಿಷವನ್ನು ಕೂಡಲೇ ತಡೆಯಬೇಕು. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ತುಮಕೂರು ಬಿಜೆಪಿ ಯುವ ಘಟಕ ಮತ್ತು ನಗರ ಘಟಕ ಮುಖಂಡರು ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್‌ಗೆ ಮನವಿ ಮಾಡಿದರು. ಕಳೆದ ಚುನಾವಣೆ ಸಂದರ್ಭದಲ್ಲೂ ಇದೇ ರೀತಿಯಾಗಿ ಆಣೆ ಪ್ರಮಾಣ ನಡೆದಿತ್ತು ಎನ್ನಲಾಗಿದೆ