ಬೆಂಗಳೂರು, ಡಿಸೆಂಬರ್ 15; ಕರ್ನಾಟಕದ ಆಡಳಿತ ಪಕ್ಷ ಬಿಜೆಪಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿದೆ. ಪಕ್ಷದಲ್ಲಿನ ಗುಂಪುಗಾರಿಕೆ ಕುರಿತು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದು, ಟೀಕಾ ಪ್ರಹಾರ ನಡೆಸಿದೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಪರಮೇಶ್ವರ ಮೆಲ್ಲಗೆ ಕುರ್ಚಿಗೆ ಟವೆಲ್ ಹಾಸಿ ಕುಳಿತಿದ್ದಾರೆ. ಈ ವಿಷಯ ತಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಹೊಸ ಖೆಡ್ಡವನ್ನು ತೋಡುತ್ತಿದ್ದಾರೆ’ ಎಂದು ಹೇಳಿದೆ.
‘ಕಾಂಗ್ರೆಸ್ಗೆ “ಪವರ್ ಕ್ಯಾನ್ಸರ್” ಶುರುವಾಗಿದೆ. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಇಬ್ಬರೂ ಒಬ್ಬರಿಗಿಂತ ಇನ್ನೊಬ್ಬರು ಪವರ್ಫುಲ್ ಎಂದು ತೋರಿಸಿಕೊಳ್ಳುವ, ಹಾಗೇ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂಬ ಸಂದೇಶ ರವಾನಿಸುವುದರಲ್ಲೇ ತಮ್ಮ ಶಕ್ತಿ ವ್ಯಯಿಸುತ್ತಿದ್ದಾರೆ’ ಎಂದು ತಿಳಿಸಿದೆ.
‘ಇವರಿಬ್ಬರ ಜಗಳದಲ್ಲಿ ಡಾ. ಪರಮೇಶ್ವರ ಮತ್ತು ಖರ್ಗೆ ನಡುವೆ ಪೈಪೋಟಿ ಶುರುವಾಗಿದೆ. ಎಲ್ಲಿ ಖರ್ಗೆ ಬಂದು ಬಿಟ್ಟಾರೋ ಎಂದು ಪರಮೇಶ್ವರ ಮೆಲ್ಲಗೆ ಕುರ್ಚಿಗೆ ಟವೆಲ್ ಹಾಸಿ ಕುಳಿತಿದ್ದಾರೆ. ಈ ವಿಷಯ ತಿಳಿದಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಹೊಸ ಖೆಡ್ಡವನ್ನು ತೋಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದೆ.
‘ಎಲ್ಲಿ ತನಗಿಂತ ಬೆಳೆದು ಬಿಡುತ್ತಾರೋ ಎಂದು ಡಿ. ಕೆ. ಶಿವಕುಮಾರ್ ಅಧ್ಯಕ್ಷರಾಗೋದನ್ನು ತಪ್ಪಿಸಲು ಸಿದ್ದರಾಮಯ್ಯ ಈ ಹಿಂದೆ ಆಡಿದ ಆಟಗಳು ಒಂದೆರಡಲ್ಲ. 17 ಜನ ನಾಯಕರನ್ನು ದಿಲ್ಲಿಗೆ ಕರೆದೊಯ್ದು, ಡಿಕೆಶಿಯನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಡಿ ಎಂದು ಹಿಂದಿನಿಂದ ಬಾಣ ಬಿಟ್ಟಿದ್ದನ್ನು ಡಿಕೆಶಿ ಇನ್ನೂ ಮರೆತಿಲ್ಲ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
‘ಈಗ ಅದೇ ಕಾರಣಕ್ಕೆ ಸಿದ್ದರಾಮಯ್ಯನವರ ಸುತ್ತಲೂ ತಮ್ಮ ಬೆಂಬಲಿಗರ ಕೋಟೆ ಕಟ್ಟಿದ್ದು ಡಿ. ಕೆ. ಶಿವಕುಮಾರ್. ಈಗ ಒಳಜಗಳ ಕೇವಲ ಡಿಕೆಶಿ v/s ಸಿದ್ದರಾಮಯ್ಯನವರ ಮಧ್ಯೆಯಷ್ಟೇ ಆಗಿರದೇ ಉಭಯ ನಾಯಕರ ಬಣಗಳ ನಡುವೆ ಹೊತ್ತಿಕೊಂಡಿದೆ. ಆಯಾ ನಾಯಕರ ಬೆಂಬಲಿಗರು ಪ್ರತಿ ಕ್ಷೇತ್ರಗಳಲ್ಲಿ ಟಿಕೆಟ್ ಜಗಳ ಶುರು ಮಾಡಿಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಒಳ ರಾಜಕೀಯದ ಬಗ್ಗೆ ಬಿಜೆಪಿ ಮಾಹಿತಿ ನೀಡಿದೆ.
‘ಇಬ್ಬರು ನಾಯಕರನ್ನು ದಿಲ್ಲಿಗೆ ಕರೆದು ಸಮಾಧಾನ ಮಾಡುವಷ್ಟರಲ್ಲಿ ಈಗ ಉಭಯ ನಾಯಕರ ಬಣಗಳು ಕಿತ್ತಾಟ ಶುರು ಮಾಡಿಕೊಂಡಿರುವುದು ಕಾಂಗ್ರೆಸ್ಗೆ ತಲೆ ಬಿಸಿ ಶುರುವಾಗಿದೆ. ಇದು ಕಪ್ಪೆಗಳನ್ನು ಹಿಡಿದು ಕೊಳಗ ತುಂಬಿದಂತಾಗಿದ್ದು, ಇವರ ಜಗಳವನ್ನೇ ಸುಧಾರಿಸುತ್ತಿದ್ದರೆ ಚುನಾವಣೆಗೆ ಹೊರಡುವುದು ಯಾವಾಗ ಎಂಬಂತಾಗಿದೆ’ ಎಂದು ಬಿಜೆಪಿ ಟ್ವೀಟ್ ಮೂಲಕ ತಿವಿದಿದೆ.
‘ರಾಹುಲ್ ಗಾಂಧಿ ಸ್ಟೇಜ್ ಮೇಲೆ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರನ್ನು ತಬ್ಬಿಕೊಳ್ಳುವಂತೆ ಮಾಡಿದರೂ ಕೆಳಗಿಳಿದು ಮತ್ತದೇ ಕಿತ್ತಾಟ ಶುರು ಮಾಡುವುದನ್ನು ನೋಡಿ, ಬೇಸತ್ತು ಖರ್ಗೆಯವರನ್ನು ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಟ್ಟರು, ಸೋಜಿಗವೆಂದರೆ ಖರ್ಗೆಯವರೇ ಮತ್ತೊಂದು ಗುಂಪಿನ ನಾಯಕ!’ ಎಂದು ಬಿಜೆಪಿ ಲೇವಡಿ ಮಾಡಿದೆ.

