Ram Navami Celebrations at Ayodhya: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕ ಮೊದಲ ರಾಮ ನವಮಿ ಆಚರಣೆ ನಡೆಯುತ್ತಿದೆ. ಸಂಭ್ರಮದ ಕ್ಷಣದಲ್ಲಿ ಬಾಲ ರಾಮನ ದರ್ಶನಕ್ಕೆ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬಂದಿದ್ದಾರೆ. ಇದೇ ವೇಳೆ ಸೂರ್ಯರಶ್ಮಿ ಬಾಲರಾಮನ ಸ್ಪರ್ಶಿಸುವ ವಿಶೇಷ ವಿದ್ಯಮಾನವೂ ನಡೆಯಲಿದ್ದು, ಅದನ್ನು ವೀಕ್ಷಿಸಲು ಭಕ್ತರು ಕಾತರದಿಂದಿದ್ದಾರೆ.

ಮಂದಿರ ನಿರ್ಮಾಣದ‌ ಬಳಿಕ ಮೊದಲ ರಾಮನವಮಿ: ಅಯೋಧ್ಯೆಯಲ್ಲಿ ಬಾಲರಾಮನ ಸ್ಪರ್ಶಿಸಲಿದೆ ಸೂರ್ಯರಶ್ಮಿ

ನವದೆಹಲಿ, ಏಪ್ರಿಲ್ 17: ನೂರಾರು ಕೋಟಿ ಭಕ್ತರ ಕನಸು ಜನವರಿ 22ರಂದು ನೆರೆವೇರಿತ್ತು. 500 ವರ್ಷಗಳ ಕಾಯುವಿಕೆಗೆ ತೆರೆ ಬಿದ್ದಿತ್ತು. ನಾನಾ ಕಸರತ್ತು-ಜಟಾಪಟಿಗಳ ನಡುವೆ ಬಾಲರಾಮ ಅಯೋಧ್ಯೆಯಲ್ಲಿ (Ayodhya) ವಿರಾಜಮಾನನಾಗಿದ್ದಾರೆ. ಇದೀಗ ಪ್ರಾಣ ಪ್ರತಿಷ್ಠಾಪನೆ ಬಳಿಕ ಮೊದಲ ರಾಮನವಮಿ (Ram Navami) ಬಂದಿದೆ. ಇದಕ್ಕಾಗಿ ಅಯೋಧ್ಯೆ ಸಿಂಗಾರಗೊಂಡಿದ್ದು, ಭಕ್ತರನ್ನ ಕೈಬೀಸಿ ಕರೆಯುತ್ತಿದೆ. ಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆ ಮತ್ತೊಮ್ಮೆ ಜಗಮಗಿಸುತ್ತಿದೆ. ಸಾವಿರಾರು ಭಕ್ತರಿಂದ ರಾಮಜನ್ಮಭೂಮಿ ಕೇಸರಿಮಯವಾಗಿ ಮಾರ್ಪಟ್ಟಿದೆ. ಇಂದು ರಾಮನವಮಿ ಹಿನ್ನೆಲೆಯಲ್ಲಿ ಬಾಲರಾಮನ ಕಣ್ತುಂಬಿಕೊಳ್ಳಲು ದೇಶದ ಹಲವೆಡೆಯಿಂದ ಭಕ್ತ ಸಾಗರವೇ ಹರಿದುಬಂದಿದೆ.

ವಿಶೇಷ ಎನ್ನುವಂತೆ ಇಂದು ಮಧ್ಯಾಹ್ನ 12:16ರ ಸುಮಾರಿಗೆ ಸೂರ್ಯಕಿರಣಗಳು ಬಾಲರಾಮನ ಮೂರ್ತಿಗೆ ಮುತ್ತಿಕ್ಕಲಿವೆ. ಸುಮಾರು 5 ನಿಮಿಷಗಳ ಕಾಲ ಸೂರ್ಯ ರಶ್ಮಿ ಬಾಲರಾಮನ ಮೇಲಿರಲಿದ್ದು, ವಿಶೇಷ ಕ್ಷಣ ಕಣ್ತುಂಬಿಸಿಕೊಳ್ಳಲು ರಾಮಭಕ್ತರು ಕುತೂಹಲದಿಂದ ಕಾಯುತ್ತಿದ್ದಾರೆ. ಭಕ್ತರ ಕಣ್ಮನ ಸೆಳೆಯಲು ಅಯೋಧ್ಯೆ ಬೀದಿಗಳಲ್ಲಿ 100ಕ್ಕೂ ಹೆಚ್ಚು ಎಲ್​ಇಡಿ ಪರದೆ ಅಳವಡಿಕೆಗೆ ಟ್ರಸ್ಟ್ ಮುಂದಾಗಿದೆ.

ಸುಮಾರು 17 ಲಕ್ಷ ಭಕ್ತರು ಅಯೋಧ್ಯೆಯತ್ತ ಬರುವ ನಿರೀಕ್ಷೆಯಿದೆ. ಹೀಗಾಗಿ ಮಂದಿರದ ವಿವಿಐಪಿ ಹಾಗೂ ವಿಐಪಿ ದರ್ಶನ ರದ್ದು ಮಾಡಲಾಗಿದೆ. ಬೆಳಗ್ಗೆ 3:30ರಿಂದ ರಾತ್ರಿ 11 ಗಂಟೆಯವರೆಗೆ ನಿರಂತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಬರದಂತೆ ರಾಮಮಂದಿರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮನವಿ ಮಾಡಿದ್ದಾರೆ. ನಿಮ್ಮ ಊರಿನಲ್ಲಿಯೇ ಇದ್ದು ರಾಮನವಮಿ ಆಚರಿಸಿ, ಅಯೋಧ್ಯೆ ರಾಮಮವಮಿ ಆಚರಣೆ ಟಿವಿಯಲ್ಲಿಯೇ ನೋಡಿ ಎಂದಿದ್ದಾರೆ.

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ರಾಮನವಮಿಗೆ ಅಯೋಧ್ಯೆ ಸಜ್ಜಾಗಿದೆ. ಲಕ್ಷಾಂತರ ಜನರು ರಾಮನನ್ನ ಕಣ್ತುಂಬಿಕೊಳ್ಳಲು ಅಯೋಧ್ಯೆಯತ್ತ ದೌಡಾಯಿಸುತ್ತಿದ್ದಾರೆ. ಈ ನಡುವೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಅಯೋಧ್ಯೆಯಲ್ಲಿ ಇಂದು ಬೆಳಗಿನ ಜಾವ ರಾಮನನ್ನು ಎಬ್ಬಿಸುವ ಮಂಗಲ ಆರತಿಯಿಂದ ರಾಮ ನವಮಿ ಆರಂಭಗೊಂಡಿದೆ. ಬಳಿಕ ಬಾಲ ರಾಮನಿಗೆ ಪಂಚಾಮೃತ ಅಭಿಷೇಕ ಹಾಗೂ ಶೃಂಗಾರ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆಯಲಿದೆ. 6 ಗಂಟೆಗೆ ಮೊದಲ ಶೃಂಗಾರ ಆರತಿ ನಡೆದಿದೆ. ರಾಮ ನವಮಿಯ ಅಯಧ್ಯೆಯ ಕಾರ್ಯಕ್ರಮ ದೂರದರ್ಶನದಲ್ಲಿ ನೇರಪ್ರಸಾರವಿದೆ