ತುಮಕೂರು ನಗರದಲ್ಲಿ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಮ ಗಾತ್ರದ ಗುಂಡಿಗಳದ್ದೇ ಕಾರುಬಾರು. ಕ್ಯಾತ್ಸಂದ್ರ ಬಳಿಯ ಜಾಸ್ ಟೋಲ್​ಗೇಟ್​ನಿಂದ ಶಿರಾ ಟೋಲ್​ಗೇಟ್​ ವರೆಗಿನ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ವಾಹನ ಸವಾರರಿಗೆ ನರಕದ ದರ್ಶನವಾಗುವುದಂತೂ ಗ್ಯಾರಂಟಿ.

ತುಮಕೂರು: ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿಗಳೇ ಸಾವಿನ ರಹದಾರಿಗಳಾಗಿವೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ ಬೆಂಗಳೂರು – ಪುಣೆ ಸಂಪರ್ಕ ಕಲ್ಪಿಸೋ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 48 ಸಾವಿನ ರಸ್ತೆಯಾಗಿ ಪರಿವರ್ತನೆಯಾಗ್ತಿದೆ.

ಹೌದು, ಈ ಹೆದ್ದಾರಿಯಲ್ಲಿ ನಿತ್ಯ ಲಕ್ಷಾಂತರ ಜನ ಸಂಚರಿಸುತ್ತಾರೆ. ರಾಜ್ಯದ ಬಹುತೇಕ ಜಿಲ್ಲೆಯ ಜನ ಇದೇ ಹೆದ್ದಾರಿ ಮೂಲಕ ರಾಜಧಾನಿಯನ್ನ ತಲುಪುತ್ತಾರೆ. ಆದ್ರೀಗ ಇದು ರಾಷ್ಟ್ರೀಯ ಹೆದ್ದಾರಿಯಾಗಿಲ್ಲ, ಸಾವಿನ ರಹದಾರಿಯಾಗಿದೆ. ಒಂದಲ್ಲ, ಎರಡಲ್ಲ ಸಾವಿರಾರು ಗುಂಡಿಗಳು ಈ ಮಾರ್ಗದಲ್ಲಿ ಕಾಣ ಸಿಗುತ್ತವೆ. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತುಕೊಂಡು ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತುಮಕೂರು ಜಿಲ್ಲೆ ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲು. ಹೀಗಾಗಿ, ಜಿಲ್ಲೆಯ ರಸ್ತೆಗಳಲ್ಲಿ ವಾಹನಗಳ ನಿರಂತರ ಓಡಾಟ ಇದ್ದೇ ಇರುತ್ತದೆ. ಒಂದೊಂದರ ಪಕ್ಕ ಒಂದರಂತೆ ಮೂರು ಪಥಗಳಿರುವ ಈ ಹೆದ್ದಾರಿಯಲ್ಲಿ ಬಹುತೇಕ ಭಾಗ ಹೊಂಡಗಳೇ ತುಂಬಿಕೊಂಡಿದ್ದು, ಸ್ವಲ್ಪ ಯಾಮಾರಿದ್ರೂ ಸವಾರರ ಜೀವಕ್ಕೆ ಕುತ್ತು.

ಕ್ಯಾತ್ಸಂದ್ರ ಬಳಿಯ ಜಾಸ್ ಟೋಲ್ಗೇಟ್ನಿಂದ ಶಿರಾ ಟೋಲ್ಗೇಟ್ ವರೆಗಿನ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಸವಾರರಿಗೆ ಸುಮಾರು 20 ಕಿಲೋ ಮೀಟರ್ ನರಕದ ದರ್ಶನವಾಗುದಂತೂ ಗ್ಯಾರಂಟಿ. #ಕನ್ನಡನ್ಯೂಸ್ #KannadaNews