ಚಿರತೆ ದಾಳಿಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ಸೇವೆ ಸಕಾಲದಲ್ಲಿ ಸಿಗದ ಬಗ್ಗೆ ಸಾರ್ವಜನಿಕ ವಲಯದಲ್ಲಿಆಕ್ರೋಶ ವ್ಯಕ್ತವಾಗಿತ್ತು. ಆಗ ತಹಸೀಲ್ದಾರ್‌ ನಹೀದಾ ಸ್ಟಿಂಗ್‌ ಆಪರೇಷನ್‌ಗೆ ಮುಂದಾದರು. ಆಂಬುಲೆನ್ಸ್ ಬರುವುದು 1 ಗಂಟೆ ತಡವಾಗುತ್ತದೆ. ಅಲ್ಲಿಯವರೆಗೆ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ,” ಎಂದು ಉಡಾಫೆ ಉತ್ತರ ನೀಡಿದ್ದು, ಆಂಬುಲೆನ್ಸ್ ಸಿಬ್ಬಂದಿಗಳ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದ್ದಾರೆ.

  • ತುಮಕೂರು ಜಿಲ್ಲೆ ಕೊರಟಗೆರೆಯ ತಹಸೀಲ್ದಾರ್‌ ನಾಹೀದಾ ಸಾಂಗ್ಲಿಯಾನ ಸಿನಿಮಾ ಮಾದರಿಯಲ್ಲಿ ಸ್ಟಿಂಗ್‌ ಆಪರೇಷನ್‌ ನಡೆಸಿ ಆಂಬ್ಯುಲೆನ್ಸ್‌ನ ‘ಕೃತಕ ಸಮಸ್ಯೆ’ಯನ್ನು ಬಯಲಿಗೆಳೆದಿದ್ದಾರೆ.
  • ಆಂಬುಲೆನ್ಸ್ ಬರುವುದು 1 ಗಂಟೆ ತಡವಾಗುತ್ತದೆ. ಅಲ್ಲಿಯವರೆಗೆ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ,” ಎಂದು ಉಡಾಫೆ ಉತ್ತರ ನೀಡಿದರು.
  • 108 ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಹೀದಾ ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾಆರೋಗ್ಯಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.

ತುಮಕೂರು: ಸಾಂಗ್ಲಿಯಾನ ಸಿನಿಮಾದಲ್ಲಿ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಶಂಕರ್‌ನಾಗ್‌ ಮಾರುವೇಷ ಧರಿಸಿ ಪೊಲೀಸ್‌ ಸಿಬ್ಬಂದಿಗೆ ಪಾಠ ಕಲಿಸುವ ದೃಶ್ಯ ನೋಡಿದ್ದೀರಿ. ತುಮಕೂರು ಜಿಲ್ಲೆ ಕೊರಟಗೆರೆಯ ತಹಸೀಲ್ದಾರ್‌ ನಾಹೀದಾ ಅದೇ ಮಾದರಿಯಲ್ಲಿ ಸ್ಟಿಂಗ್‌ ಆಪರೇಷನ್‌ ನಡೆಸಿ ಆಂಬ್ಯುಲೆನ್ಸ್‌ನ ‘ಕೃತಕ ಸಮಸ್ಯೆ’ಯನ್ನು ಬಯಲಿಗೆಳೆದಿದ್ದಾರೆ.

ಶನಿವಾರ ಬೆಳಗ್ಗೆ ತಾಲೂಕಿನ ಇರಕಸಂದ್ರ ಕಾಲೊನಿಯಲ್ಲಿ ಚಿರತೆ ದಾಳಿಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ಸೇವೆ ಸಕಾಲದಲ್ಲಿ ಸಿಗದ ಬಗ್ಗೆ ಸಾರ್ವಜನಿಕ ವಲಯದಲ್ಲಿಆಕ್ರೋಶ ವ್ಯಕ್ತವಾಗಿತ್ತು. ತಾಲೂಕಿನಲ್ಲಿ ಆಂಬ್ಯುಲೆನ್ಸ್‌ ಇದ್ದರೂ ಸೇವೆ ಏಕೆ ಲಭ್ಯವಾಗಿಲ್ಲಎಂದು ಯೋಚಿಸಿದ ತಹಸೀಲ್ದಾರ್‌ ನಹೀದಾ ಸ್ಟಿಂಗ್‌ ಆಪರೇಷನ್‌ಗೆ ಮುಂದಾದರು. ಸಂಜೆ 5 ಗಂಟೆಗೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ನಾಹೀದಾ ಆಂಬ್ಯುಲೆನ್ಸ್‌ ಸೇವೆ ಅವ್ಯವಸ್ಥೆ ಬಗ್ಗೆ ರೋಗಿಗಳ ದೂರು ಕೇಳಿ, 5 ಗಂಟೆ 2 ನಿಮಿಷಕ್ಕೆ ರಾಮಕ್ಕ ಹೆಸರಲ್ಲಿ108 ಕ್ಕೆ ಕರೆ ಮಾಡಿ, ವಡ್ಡಗೆರೆ ಕ್ರಾಸ್‌ ಬಳಿ ಅಪಘಾತವಾಗಿದೆ ಎಂದು 108 ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಮಾಹಿತಿ ನೀಡಿದರು.


ನಂತರ ಕರೆ ಆಂಬ್ಯುಲೆನ್ಸ್‌ ಸಿಬ್ಬಂದಿಗೆ ವರ್ಗಾವಣೆ ಆಯಿತು. ಸಿಬ್ಬಂದಿ ಉಮಾದೇವಿ ಅವರು ರಾಮಕ್ಕ (ತಹಸೀಲ್ದಾರ್‌ ನಾಹೀದಾ) ಜತೆ 8 ನಿಮಿಷ ಮಾತನಾಡಿದ ಬಳಿಕ, ‘ಆಂಬ್ಯುಲೆನ್ಸ್‌ ತೋವಿನಕೆರೆ ಬಳಿ ಇದೆ. ಅಲ್ಲಿಂದ ಬರುವುದು 1 ಗಂಟೆ ತಡವಾಗುತ್ತದೆ. ಅಲ್ಲಿಯವರೆಗೆ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ,’ ಎಂದು ಉಡಾಫೆ ಉತ್ತರ ನೀಡಿದರು.


ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ಬರಲು 15-20 ನಿಮಿಷ ಸಾಕು. ಆದರೆ, ತಹಸೀಲ್ದಾರ್‌ ಕರೆ ಮಾಡಿದ ಬಳಿಕ ಆಂಬ್ಯುಲೆನ್ಸ್‌ ಬಂದಿದ್ದು 1 ಗಂಟೆಯ ಬಳಿಕ. ಅಷ್ಟೊತ್ತಿಗೆ ತಹಸೀಲ್ದಾರ್‌ ಸ್ಥಳದಿಂದ ಹಿಂತಿರುಗಿದ್ದರು. 108 ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಹೀದಾ ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾಆರೋಗ್ಯಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.


108 ಸೇವೆಯ ನಿರ್ವಹಣೆ ವೈಫಲ್ಯ ಬಯಲಾಗಿದೆ. ಖುದ್ದು ಸ್ಟಿಂಗ್‌ಆಪರೇಷನ್‌ ಮಾಡಿ ಪರಿಸ್ಥಿತಿ ಅರಿತಾಗ ನಿಜಕ್ಕೂ ಆಘಾತವಾಗಿದೆ. ಅಧಿಕಾರಿಗಳು, ಸಿಬ್ಬಂದಿ ಮಾನವೀಯತೆಯಿಂದ ಕೆಲಸ ಮಾಡಬೇಕು. ಆಂಬ್ಯುಲೆನ್ಸ್‌ ಇದ್ದರೂ ಸೇವೆ ನೀಡಲು ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ತಹಸೀಲ್ದಾರ್‌, ನಾಹೀದಾ ಹೇಳಿದ್ದಾರೆ