ಬಳ್ಳಾರಿ: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಿಸಿದ ಬೆನ್ನಲ್ಲೇ ಅವರ ಪತ್ನಿ ಲಕ್ಷ್ಮಿ ಅರುಣಾ ಅವರು 2023ನೇ ರಾಜ್ಯ ವಿಧಾನಸಭೆ ಚುನಾವಣೆಗೆ ಪಕ್ಷದ ಅಧಿಕೃತ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದರು.

ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಕುರುಬ ಸಮುದಾಯದ ಕುರಿ ಗಂಗಾಧರ ಅವರ ಮನೆಯಲ್ಲಿ ಸಾಂಪ್ರದಾಯದಂತೆ ಐದು ದಿನಿಸು ಧಾನ್ಯ, ಉತ್ತುತ್ತಿ, ಕೊಬ್ಬರಿ ಬಟ್ಟಲು, ಅರಿಶಿನ ಕೊಂಬು, ಬೆಳ್ಳುಳ್ಳಿಯನ್ನು ಲಕ್ಷ್ಮಿ ಅರುಣಾ ಅವರಿಗೆ ಉಡಿತುಂಬುವ ಮೂಲಕ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಲಕ್ಷ್ಮಿ ಅರುಣಾ ಅವರನ್ನು ಕುರುಬರ ಸಾಂಪ್ರದಾಯಿಕ ವಾದ್ಯ ಡೊಳ್ಳು, ತಾಷಾ ರಾಮ್ ಡೋಲ್, ಬಾಣ ಬಿರುಸುಗಳ ಮೂಲಕ ಭರ್ಜರಿ ಸ್ವಾಗತ ಕೋರಲಾಯಿತು. ಗ್ರಾಮದ ದೇವತೆ ಮರಿಯಮ್ಮ, ದುರ್ಗಮ್ಮ ದೇವಿಯ ದರ್ಶನ, ಬೀರಪ್ಪ ದೇವರ ದರ್ಶನ ಪಡೆದ ಅರುಣಾ ಅವರಿಗೆ ಗ್ರಾಮದ ಕೆಲ ಕುರುಬ ಸಮುದಾಯದ ಮಹಿಳೆಯರು ಕಂಬಳಿ ಹಾಕಿ, ಕುರಿಮರಿಯನ್ನು ನೀಡಿ ಸನ್ಮಾನಿಸಲಾಯಿತು. ಇದೇ ವೇಳೆವ ಪಕ್ಷದ ಬಾವುಟವನ್ನು ಹಾರಿಸುವ ಮೂಲಕ ಬಿಡುಗಡೆಗೊಳಿಸಿದರು.
ಬಳಿಕ ಕುರುಬರ ಕುರಿ ಗಂಗಾಧರ ಮನೆಯಲ್ಲಿ ಕುಟುಂಬದ ಮಹಿಳೆಯರು ಲಕ್ಷ್ಮಿ ಅರುಣಾ ಅವರಿಗೆ ಉಡಿ ತುಂಬಿದರು. ಬಳಿಕ ಲಕ್ಷ್ಮಿ ಅರುಣಾ ಅವರು ಐದು ಜನ ಮಹಿಳೆಯರಿಗೆ ಉಡಿ ತುಂಬಿದರು.
ಈ ವೇಳೆ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಕಳೆದ ಡಿ.25 ರಂದು ‘ಕಲ್ಯಾಣರಾಜ್ಯ ಪ್ರಗತಿ ಪಕ್ಷ’ವನ್ನು ಘೋಷಿಸಿದರು. ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಪಡಿಸುವ ಕನಸು ಹೊಂದಿದ್ದರು. ಇಡೀ ರಾಜ್ಯ ಕಲ್ಯಾಣ ರಾಜ್ಯ ಆಗಬೇಕು. ಅದರಲ್ಲೂ ಬಳ್ಳಾರಿ ಜಿಲ್ಲೆ ವಿಶ್ವದ ಭೂಪಟದಲ್ಲಿ ಎದ್ದು ಕಾಣುವಂತೆ ಅಭಿವೃದ್ಧಿ ಆಗಬೇಕೆಂಬುದು ಜನಾರ್ದನ ರೆಡ್ಡಿ ಅವರ ಗುರಿ, ಅವರ ಜೀವನದ ಜೊತೆ ಹೆಜ್ಜೆ ಹಾಕುವ ನಾನು. ಅವರ ಹೊಸ ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತ, ಅವರು ಬಳ್ಳಾರಿ ಜಿಲ್ಲೆಗೆ ಬರಲು ಅವಕಾಶ ಇಲ್ಲದ ಕಾರಣ ನಿಮ್ಮ ಗ್ರಾಮಕ್ಕೆ ಬಂದಿರುವೆ. ತಂದೆ ತಾಯಿ ಬಂಧು ಬಳಗ ಎಲ್ಲರೂ ನೀವೇ ನಮಗೆ. ಕಲ್ಯಾಣ ರಾಜ್ಯ ನಿರ್ಮಾಣಕ್ಕಾಗಿ ನಿಮ್ಮ ಸಹಕಾರ ಇರಲಿ ಎಂದರು.
ಬುಡ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್, ಪಾಲಿಕೆ ಮಾಜಿ ಸದಸ್ಯ ಗೌಳೇರ ಚಂದ್ರ, ಸಂಜಯ್ ಬೆಟಗೇರಿ, ಬಿ.ಕೆ.ಬಿ.ಎನ್ ಮೂರ್ತಿ, ಊರಿನ ಮುಖಂಡ ಬಸವರಾಜ್ ಸ್ವಾಮಿ ಮೊದಲಾದವರು ಇದ್ದರು.

